
ಕೃಷಿ ಸಂಶೋಧನಾ ಕೇಂದ್ರ, ಬೀದರ
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ವ್ಯಾಪ್ತಿಯಲ್ಲಿ ಬರುವ ಕೃಷಿ ಸಂಶೋಧನಾ ಕೇಂದ್ರ ಬೀದರ ವಲಯ ಒಂದರಲ್ಲಿ ವರ್ಗಿಕರಿಸಲಾಗಿದೆ ಮತ್ತು ಈ ವಲಯ ರಾಜ್ಯದ ಕೃಷಿ ವಲಯಗಳಲ್ಲಿ ಒಂದಾದ ಚಿಕ್ಕ ವಲಯವೆಂದೇ ಗುರುತಿಸಲಾಗಿದೆ. ಮುಖ್ಯ ಬೆಳೆಗಳಾದ ಮುಂಗಾರಿನಲ್ಲಿ ಸೊಯಾಬೀನ್, ಜೋಳ, ಹೆಸರು, ಮತ್ತು ತೊಗರಿ ಬೆಳೆಯಲಾಗುತ್ತದೆ. ಹಿಂಗಾರಿನಲ್ಲಿ ಕುಸುಬೆ, ಕಡಲೆ, ಗುರೆಳ್ಳು, ಜೋಳ(ಹಿಂಗಾರು ಹಾಗೂ ಮುಂಗಾರು) ಮತ್ತು ಕಬ್ಬು ಬೆಳೆಯಲಾಗುತ್ತದೆ.
ಕೃಷಿ ಸಂಶೋಧನಾ ಕೇಂದ್ರ, ಬೀದರನಲ್ಲಿ ಸ್ಥಾಪನೆಗೊಳ್ಳುವ ಪೂರ್ವ ಈ ಸಂಸ್ಥೆಯಡಿಯಲ್ಲಿ ಬರುವ ಭೂಮಿಯನ್ನು ಆಗಿನ ಹೈದ್ರಾಬಾದ್ ನವಾಬನಾದ ನಿಜಾಮ್ ಅವರ ಆಧಿನದಲ್ಲಿತ್ತು. ಅವರು ಆ ಜಾಗದಲ್ಲಿ ಸುಂದರವಾದ ಉದ್ಯಾನವನ ಮತ್ತು ವಿಶ್ರಾಂತಿ ಮನೆಯನ್ನೂ ಕಟ್ಟಿಸಿದರು. ನಿಜಾಮರು ಬೀದರ ಪ್ರವಾಸ ಕೈಗೊಂಡು ಬಿಡುವಾದ ಸಮಯದಲ್ಲಿ ಆ ಒಂದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ತರುವಾಯ 1963 ರಲ್ಲಿ ಉದ್ಯಾನವನ್ನು ಕೃಷಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ತದನಂತರ ಅದನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುವುದಲ್ಲದೆ, ಕ್ರಮೇಣವಾಗಿ ಅದನ್ನು ಕೃಷಿ ಸಂಶೋಧನಾ ಕೇಂದ್ರವನ್ನಾಗಿ ರ್ಮಾಪಡಿಸಲಾಯಿತು. ಬೀದರನ ಆವರಣದ ಅಡಿಯಲ್ಲಿ ಎರಡು ಕೃಷಿ ಸಂಶೋಧನಾ ಕೇಂದ್ರಗಳಿವೆ ಒಂದು ಕೇಂದ್ರ ಹಳ್ಳದಕೇರಿ ಮತ್ತೊಂದು ಕೇಂದ್ರ ಜನವಾಡದಲ್ಲಿದೆ.
ಹಳ್ಳದಕೇರಿಯಲ್ಲಿ ಬರುವ ಒಟ್ಟು ಕೃಷಿ ಕ್ಷೇತ್ರ (12.67 ಹೆಕ್ಟರ್) ಆಗಿದ್ದು, ಕೆಂಪು ಜಂಬಟ್ಟಿಗೆ ಮಣ್ಣಿನ ವಿಧವಾಗಿದ್ದು ಸಂಪೂರ್ಣ ನೀರಾವರಿ ಕ್ಷೇತ್ರವಾಗಿದೆ. ಹಳ್ಳದಕೇರಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ವಿವಿಧ ಬೆಳೆಗಳಾದ ಕಬ್ಬು ಸೊಯಾಅವರೆ ಮತ್ತು ತೊಗರಿ ಬೆಳೆಗಳಲ್ಲಿ ಸಂಶೋಧನಾ ಚಟುವಟಿಕೆಗಳು ನಡೆಯುತ್ತವೆ. ಅದು ಅಲ್ಲದೇ ಸೋಯಾಅವರೆ ಹಾಗೂ ಗೋಧಿಯಲ್ಲಿ ತಾಯಿ ಹಾಗೂ ತಳಿವರ್ಧಕ ಬೀಜೋತ್ಪಾದನೆಯನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ ಕಬ್ಬಿನ ಬೀಜೋತ್ಪಾನೆ ಕೂಡಾ ಮಾಡಲಾಗುತ್ತಿದೆ. ಜನವಾಡ ಕೃಷಿ ಕ್ಷೇತ್ರವು ಒಟ್ಟು (14.58 ಹೆಕ್ಟರ್) ಇದ್ದು, ಸಾಧಾರಣ ಕಪ್ಪು ಮಣ್ಣು ಹೊಂದಿರುವುದಲ್ಲದೆ, ಸಂಪೂರ್ಣವಾಗಿ ಮಳೆಯ ಆಶ್ರಯದ ಮೇಲೆ ಆವಲಂಬನೆಯಾಗಿರುತ್ತದೆ. ಈ ಕೇಂದ್ರದಲ್ಲಿ ಮುಖ್ಯವಾಗಿ ಉದ್ದು, ಹೆಸರು ಹಾಗೂ ಸೋಯಾಅವರೆ ಬೆಳೆಗಳಲ್ಲಿ ತಳಿ ಅಭಿವೃದ್ಧಿ, ಬೇಸಾಯ ತಂತ್ರಜ್ಞಾನ ಹಾಗೂ ಸಸ್ಯ ಸಂರಕ್ಷಣೆ ಬಗ್ಗೆ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ತೊಗರಿ, ಕಡಲೆ, ಹಿಂಗಾರಿ ಜೋಳ, ಎಳ್ಳು, ಗುರಳ್ಳಿ, ಸಿರಿಧಾನ್ಯ ಹಾಗೂ ಸೂರ್ಯಕಾಂತಿ ಬೆಳೆಗಳಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ.
ಈ ಕೇಂದ್ರದ ಮುಖ್ಯ ಉದ್ದೇಶ ವಲಯ-1ರ ಪ್ರಮುಖ ಬೆಳೆಗಳಾದ ಸೋಯಾಅವರೆ, ಹೆಸರು, ಉದ್ದು, ತೊಗರಿ ಮತ್ತು ಕಬ್ಬಿನಲ್ಲಿ ತಳಿ ಅಭಿವೃದ್ಧಿ, ಬೆಸಾಯ ತಂತ್ರಜ್ಞಾನ ಹಾಗೂ ಸಸ್ಯ ಸಂರಕ್ಷಣೆಗಳ ಬಗ್ಗೆ ಸಂಶೋಧನೆ ಕೈಗೊಳ್ಳವುದು. ಕೃಷಿ ಸಂಶೋಧನಾ ಕೇಂದ್ರ, ಬೀದರನ ತಳಿ ಅಭಿವೃದ್ಧಿಯಲ್ಲಿ ಮಾಡಿದ ಪ್ರಮುಖ ಸಾಧನೆಗಳೆಂದರೆ ಉದ್ದಿನಲ್ಲಿ (TAU-1, DU-1), ಹೆಸರಿನಲ್ಲಿ (Chinamung, Selection-4 & BGS-9), ತೊಗರಿಯಲ್ಲಿ (BSMR-736), ಸೋಯಾಅವರೆಯಲ್ಲಿ (JS-335, DSb-21) ಮತ್ತು ಕಬ್ಬಿನಲ್ಲಿ (Co-86032, Co-06027) ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅದು ಅಲ್ಲದೇ ಪ್ರಮುಖ ಬೆಳೆಗಳಲ್ಲಿ ಬೆಳೆ ಉತ್ಪಾದನೆ ತಂತ್ರಿಕತೆ, ಬೆಳೆ ಸಂರಕ್ಷಣೆ, ಪೋಷಕಾಂಶ ನಿರ್ವಹಣೆ ಮತ್ತು ಬೀಜ ತಾಂತ್ರಿಕತೆಯ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕೇಂದ್ರದಿಂದ ಸಸ್ಯ ಸಂರಕ್ಷಣೆಯಲ್ಲಿ ಕೈಗೊಂಡ ಪ್ರಮುಖ ಸಂಶೋಧನೆಗಳೆಂದರೆ ಶುಂಠಿ, ಹೆಸರು, ಉದ್ದು ಮತ್ತು ತೊಗರಿ ಬೆಳೆಗಳಲ್ಲಿ ಸಮಗ್ರ ರೋಗ ನಿರ್ವಹಣೆ, ಅದರಂತೆ ತೊಗರಿ, ಹೆಸರು, ಉದ್ದು ಮತ್ತು ಕಬ್ಬಿನಲ್ಲಿ ಸಮಗ್ರ ಕೀಟ ನಿರ್ವಹಣೆಗಳ ಸಂಶೋಧಿಸಲಾಗಿದೆ.
2011 ರಲ್ಲಿ ಕೃಷಿ ಸಂಶೋಧನಾ ಕೇಂದ್ರ, ಬೀದರನಲ್ಲಿ ಪ್ರತ್ಯೇಕವಾಗಿ ಬೀಜ ಘಟಕವನ್ನು ಸ್ಥಾಪಿಸಲಾಗಿದೆ. ಇದರ ಉದ್ದೇಶವೇನೆಂದರೆ ರೈತ ಸಮುದಾಯಕ್ಕೆ ವಲಯ-1ರ ಪ್ರಮುಖ ಬೆಳೆಗಳಾದ ಹೆಸರು, ಉದ್ದು, ತೊಗರಿ, ಕಡಲೆ ಮತ್ತು ಸೊಯಾಅವರೆ ತಾಯಿ ಬೀಜ ಹಾಗೂ ತಳಿವರ್ಧಕ ಬೀಜಗಳ ಉತ್ಪಾದನೆ ಹಾಗೂ ರೈತರ ಸಹಭಾಗಿತ್ವದಲ್ಲಿ ಮೂಲ ಹಾಗೂ ಪ್ರಮಾಣಿತ ಬೀಜಗಳ ಉತ್ಪಾದನೆ, ಸಂಸ್ಕರಣೆ ಹಾಗೂ ಸರಬರಾಜು ಚಟುವಟಿಕೆಗಳನ್ನು ಕೈಗೊಳಲಾಗುತ್ತಿದೆ.